You are currently browsing the monthly archive for August 2008.
ಒಬ್ಬ ಚಪ್ಪಲಿ ಆರಿಸಿದ. ಯಾವ ಕಂಪನೀದು ಎಲ್ಲಿ ತಯಾರಾಗಿದ್ದು ಬೆಲೆ ಎಷ್ಟು ಎಂದೆಲ್ಲ ಕೇಳಿದ. ದುಡು ಕೊಡುತ್ತ ಮತ್ತೆ ಪ್ರಶ್ನಿಸಿದ – ಬಾಳಿಕೆ ಬರುತ್ತಾ ?
ಬಹಳ ಹೊತ್ತಿನಿಂದ ಇದನ್ನೆಲ್ಲ ನೋಡುತ್ತಿದ್ದ ಮತ್ತೊಬ್ಬ ತನ್ನ ಚರ್ಮವನ್ನೇ ಚಿವುಟಿಕೊಳ್ಳುತ್ತಾ – ಇದೇ ಗ್ಯಾರಂಟಿ ಇಲ್ಲ ಸ್ವಾಮಿ ಅಂದ.
ಮರಗಟ್ಟಿದೆ. ಬಹುಶಃ ಇದು ನನ್ನ ಕಾಲಲ್ಲ. ಕುರ್ಚಿಯ ಕಾಲೇ? ಇಲ್ಲ ಇಲ್ಲ ಚಿಗಿತು ಚಿಗಿತು ಮರವಾಗುತ್ತಿದೆ. ಕಣ್ಣು ಬಿಟ್ಟಾಗ ಎದುರಿದ್ದವನು ಬಡಗಿ.
ಒಬ್ಬನಿಗೆ ಸುಖದ ಸಾವು ಬೇಕು ಅನ್ನಿಸುತ್ತೆ. ನಿದ್ದೇಲಿ ಸತ್ತೋರು ಸುಪ್ಪತ್ತಿಗೇಲಿ ಸತ್ತೋರು, ಸಂಭೋಗದಲ್ಲೇ ಸತ್ತೋರು. ಹೀಗೆ ಎಲ್ಲರನ್ನೂ ನೋಡಿ ಸಾಕಾದ ಅವನಿಗೆ ಹಕ್ಕಿಯೊಂದು ಕಾಣುತ್ತೆ. ಅದರ ದಾರಿ ಹಿಡಿತಾನೆ.
ಊರಲ್ಲಿ
ಗುಲ್ಲೋ ಗುಲ್ಲು. ಕಳೆದು ಹೋದ ಅಂತಾರೆ ಕೆಲವರು. ಬದುಕೇ ಇಲ್ಲ ಅಂತಾರೆ ಮತ್ತೆ ಕೆಲವರು.
ಅವಳು ಯಾರಿಗೂ ಕಾಣದಂತೆ ಅವನ ಸಮಾಧಿ ಮೇಲೆ ಹೂವಿಟ್ಟು ಅತ್ತಳು.
ಪಾತಕಿಗೂ ಪ್ರಪಂಚ ಇರುತ್ತೆ ಅಂತ ಜಗತ್ತು ಮೊದಲ ಸಲ ಅರಿಯಿತು.
ಪ್ರಾರ್ಥನಾ ಮಂದಿರವೊಂದರಲ್ಲಿ ಬಾಂಬ್ ಸಿಡಿಯಿತು. ಪಾರಿವಾಳಗಳೆಲ್ಲ ಬೆಚ್ಚಿದವು. ಮತ್ತೆಂದೂ ಅವು ಅಲ್ಲಿ ಕೂರಲಿಲ್ಲ. ಎಲ್ಲಿ ಹೋದವು ಎಂದು ಯಾರೂ ಕೇಳಲಿಲ್ಲ.
ಮಿಡತೆಯೊಂದರ ರೆಕ್ಕೆ ಸುಟ್ಟಿತು ಜ್ವಾಲೆ. ಒಂಟಿ ರೆಕ್ಕೆಯಲ್ಲಿ ತೆವಳುತ್ತ ಹೋದ ಅದು ಸ್ವಲ್ಪ ಹೊತ್ತಿನ ನಂತರ ಮರಳಿತು. ಹಿಂದೆ ಅಸಂಖ್ಯಾತ ಮಿಡತೆಗಳು. ಎಲ್ಲವೂ ಎರಗಿದವು. ಜ್ವಾಲೆಯ ಕಥೆ ಮುಗಿಯಿತೋ ಮಿಡತೆಯ ಕತೆ ಮುಗಿಯಿತೋ ತಿಳಿಯಲಿಲ್ಲ.
ಒಬ್ಬ ಸ್ಕೂಟರ್ ಕೊಂಡ. ಅದು ಬೇಡ ಅನ್ನಿಸಿತು, ಕಾರುಕೊಂಡ. ಕಾರು ಕೂಡ ಸಾಕೆನ್ನಿಸಿತು. ಹೆಲಿಕಾಪ್ಟರಿನಲ್ಲಿ ಹಾರಿದ. ಕೊನೆಯವರೆಗೂ ಆತ ನಡೆಯಲೇ ಇಲ್ಲ. ಅವನ ಕಾಲನ್ನು ಗ್ಯಾಂಗ್ರಿನ್ ತಿಂದು ಹಾಕಿತ್ತು.
ಜನ ಜೊತೆಜೊತೆಗೆ ಬದುಕುತ್ತಿದ್ದರು. ಮಧ್ಯೆ ಮಧ್ಯೆ ಅವನು ಇಣುಕುತ್ತಿದ್ದ. ಪ್ರೀತಿಯ ನಗೆ ಬೀರುತ್ತಿದ್ದ. ಜನ ಅವನನ್ನು ಬೆಚ್ಚಗೆ ಕಾಯ್ದುಕೊಂಡರು. ಜನ ಅತ್ತಾಗ ಅವ್ನು ಕರ್ಚೀಫು ಕೊಡುತ್ತಿದ್ದ.
ಇದ್ದಕ್ಕಿದ್ದಂತೆ ಒಂದು ದಿನ ಅವನು ಹೊರಟುಹೋದ. ಜನ ಖುಷಿಯಿಂದ ನಿಡುಸೂಯ್ದರು.
ಝಗಮಗ ಬೆಳಕು. ರಾಂಪ್ ಮೇಲೆ ಅವಳು ನಡೆದಳು. ಬೆಕ್ಕಿನಂತೆ ನಕ್ಕಳು.
ಜನ ಓಹೋ ಎಂದರು.
ಒಮ್ಮೆ ಹಾಗೇ ನಡೆಯುತ್ತಿದ್ದಳು. ಅದೇ ಬೆಳಕಲ್ಲಿ ಬಟ್ಟೆ ಜಾರಿತು.
ಜನ ಓಹೋ ಎಂದರು.
ಒಂದು ರಾತ್ರಿ ಅವಳ್ ಮೇಲೆ ಯಾರೋ ಎರಗಿದರು.
ಜನ ಓಹೋ ಎಂದರು ಆಗಲೂ
ಚಂದ್ರನನ್ನು ತೋರಿಸುತ್ತ ಅಮ್ಮ ಹೇಳಿದಳು
’ಚಂದ್ರನ ಕರೆ’
ಮಗು ಸುಮ್ಮನಿತ್ತು
ತುತ್ತು ಬಾಯಿಗಿಡುತ್ತ ಇನ್ನೊಮ್ಮೆ ಕೇಳಿದಳು
ಆಗಲೂ ಮಗು ಸುಮ್ಮನಿತ್ತು.
ಮತ್ತೊಂದು ದಿನ ಅದೇ ಪ್ರಶ್ನೆ.
ಮಗು ಬಾಯಿಬಿಟ್ಟಿತು
’ಅಮ್ಮ ಕಾಲಿಲ್ಲ ಚಂದ್ರನಿಗೆ’


ಹೀಗೆಂದರು…