You are currently browsing the monthly archive for September 2008.
ಅಲ್ಲೀಗ ಅವನಿಲ್ಲ
ಅವಳೂ…
ಆ ಕಸದತೊಟ್ಟಿಯ ಮಾಂಸದ ಮುದ್ದೆ ಮಗುವಾ?
ಮೊದಲನೇ ಅಲೆ
ಮರಳು, ಕಪ್ಪೆಚಿಪ್ಪು ಹೊತ್ತು ತಂದಿತು
ಎರಡನೇ ಅಲೆ
ಲೇಡಿಸ್ ವಾಚು, ಹರಿದ ರವಿಕೆ ಎಸೆಯಿತು
ಮೂರನೇ ಅಲೆ
ದಂಡೆಯ ಅಳುವನ್ನು ಕೇಳಿಸಿಕೊಂಡಿತು.
ರೈತನೊಬ್ಬನಿಗೆ ತನ್ನ ತೋಟದಲ್ಲಿ ಒಂದೇ ರೀತಿಯ ಹೂ ಬಿಟ್ಟು ಬೇರೇನೂ ಬೆಳೆಯುವುದು ಇಷ್ಟವಿರಲಿಲ್ಲ. ಗೆಳೆಯರೆಲ್ಲ ತೋಟ ನೀಟಾಗಿರುವ ಬಗ್ಗೆ ಹೊಗಳಿದರು. ಹೂವಿನ ಸುಗ್ಗಿ ಬಂತು. ಆದರೆ ಆದದ್ದೇ ಬೇರೆ.ಆ ಹೂಗಳಿಗೆ ರಾತ್ರೋ ರಾತ್ರಿ ರೋಗ ತಗುಲಿತ್ತು.
ಇನ್ನೆಂದೂ ರೈತ ಒಂದೇ ರೀತಿಯ ಬೆಳೆ ಬೆಳೆಯಲಿಲ್ಲ.
( ಹೂವನ್ನು ಜನರೆಂದೂ, ತೋಟವನ್ನು ದೇಶವೆಂದು ಓದಿಕೊಳ್ಳಿ.)
ಚಿಕ್ಕನಾಯಕನಹಳ್ಳಿಯಲ್ಲಿ ಒಬ್ಬ ಮೇಷ್ಟ್ರು. ಊರಾಚೆಯ ತೋಟದ ಮನೆಯಲ್ಲಿ ವಾಸ. ಸ್ಕೂಲು ಮತ್ತು ಅವರು, ಅವರು ಮತ್ತು ಸ್ಕೂಲು ಅಷ್ಟೆ. ಒಂದಿನ ವಿದ್ಯಾರ್ಥಿಯೊಬ್ಬ ಅವರ ತೋಟದಮನೆಗೆ ಬಂದ. ಮೇಷ್ಟ್ರು ಒಬ್ಬರೇ ಇರೋದು ಗೊತ್ತಿತ್ತು. ಆದರೂ ಇರಲಿ ಅಂತ ಕೇಳಿದ.
“ಸಾರ್ ಒಬ್ರೇ ಇದ್ದೀರಾ?”
“ಇಲ್ಲ”
“ಸುಳ್ಳು ಹೇಳ್ತಾ ಇದ್ದೀರಾ. ನೀವು ಒಂಟಿ ಅಂತ ಊರಿಗೇ ಗೊತ್ತು.”
ಮೇಷ್ಟ್ರು ನಗುತ್ತಾ ಅಲ್ಲೇ ಹರಿಯುತ್ತಿದ್ದ ಇರುವೆ ಸಾಲು ತೋರಿಸಿ ಹೇಳಿದರು
“ನಾನೊಬ್ಬನೇ ಇಲ್ಲ”
“ಎಲ್ಲಿದ್ದೀಯಾ?”
“ಎಲ್ಲೂ ಇಲ್ಲ”
ಕಥೆಗಳೆಲ್ಲ ಖಾಲಿಯಾದವು ಎಂದುಕೊಂಡು ಒಂದು ಸಂಜೆ ಸುಮ್ಮನೆ ಕುಳಿತಿದ್ದೆ. ಮೂರು ಬೆಕ್ಕುಗಳು ಮೂರು ಕೋಳಿಮರಿಗಳನ್ನು ಹಿಡಿದು ಕಥೆ ಇನ್ನೂ ಮುಗಿದಿಲ್ಲ ಎಂದವು.
ನಕ್ಲೇಸು ರಸ್ತೆ ನಕ್ಲೇಸು ರಸ್ತೆ
ಕಪ್ಪನೆ ಕೈಯ್ಯ ಬಳಕುವ ಮೈಯ್ಯ
ಹಾವಿನ ಪೊರೆಯ, ಅಮಲಿನ ತೊರೆಯ
ನಕ್ಲೇಸು ರಸ್ತೆ ನಕ್ಲೇಸು ರಸ್ತೆ
ಕಾರಿದ್ದವರು ಮೇಲಿದ್ದವರು
ಬೂಟಿದ್ದವರು ಸೂಟಿದ್ದವರು
ಬಂದೇ ಬರುವರು ಬಂದೇ ಬರುವರು
ನಿನ್ನನು ಕಾಣಲು ನಿನ್ನನು ಕೂಡಲು
ಎಂಥ ಹೊಳಪು ಎಂಥ ಬಿಳುಪು
ಆಹಹಾ ಒಹೊಹೋ ನಿನ್ನದೆ ನೆನಪು
ನಿನ್ನಯ ತೊಡೆಯಲಿ ಮರೆತರು ಎಲ್ಲ
ಈಗಿದ್ದವರು ಆಗಿಲ್ಲ ಆಗಿದ್ದವರು ಈಗಿಲ್ಲ
ಕುಂತರು ನೀನೆ ನಿಂತರು ನೀನೆ
ಬೆಳಗಲು ನೀನೆ ಬೈಗಲು ನೀನೆ
ಮೊದಲೆಂದರೇನು ತಿಳಿದಿಲ್ಲ
ಕೊನೆಯೆಂಬುದೇನು ನಿನಗಿಲ್ಲ
ನಮ್ಮಯ ಬೀದಿ ನಮ್ಮಯ ಹಾದಿ
ಎಂದೆಂದೂ ಅದು ನಮ್ಮದು ನಮ್ಮದು
ಹೊರಟೆವು ನಾವು ನಕ್ಲೇಸು ರಸ್ತೆ
ಮರಳಿ ಬಾರೆವು ನಕ್ಲೇಸು ರಸ್ತೆ
(ಹೈದ್ರಾಬಾದ್ ಹುಸೇನ್ ಸಾಗರದ ಮಗ್ಗುಲಲ್ಲಿದೆ ನೆಕ್ಲೇಸ್ ರಸ್ತೆ.)
” ನೀವು ಕೊಟ್ಟ ಮುಲಾಮು, ಹತ್ತಿ, ಇಂಜಕ್ಷನ್, ಗುಳಿಗೆ ಇವುಗಳಿಂದೆಲ್ಲ ಈ ಕಾಯಿಲೆ ವಾಸಿಯಾಗುತ್ತಾ ಡಾಕ್ಟರ್? ಅಷ್ಟಕ್ಕೂ ಈ ಕಾಯಿಲೆ ದೇಹಕ್ಕೆ ಸಂಬಂಧಿಸಿದ್ದಾ ಅಥವಾ…?”
ಅವನು ಕುಳಿತದ್ದು ಆಸ್ಪತ್ರೆಯಲ್ಲಲ್ಲ, ಮಾತನಾಡುತ್ತಿದ್ದದ್ದು ಡಾಕ್ಟರೊಂದಿಗಲ್ಲ.
ದೃಶ್ಯ ಮಾಧ್ಯಮ ಅಕ್ಷರಗಳಂತಲ್ಲ. ಅದನ್ನು ಪಳಗಿಸಿ ನಮ್ಮದಾಗಿಸಿಕೊಳ್ಳುವುದು ಮುಖ್ಯ. ಎಲ್ಲರಿಗೂ ಅದು ಒಲಿಯುವುದಿಲ್ಲ. ಕ್ಯಾಮರಾ ಹಿಡಿದ ಮಾತ್ರಕ್ಕೆ ಎಲ್ಲವೂ ಕೃತಿಗಳಾಗುವುದಿಲ್ಲ. ಒಂದು ದೃಶ್ಯ ಹತ್ತು ಕಥೆ ಹೇಳುವ ಶಕ್ತಿ ಹೊಂದಿರುತ್ತದೆ ಎಂಬುದನ್ನು ಮನಗಂಡವನು ಮಾತ್ರ ಉತ್ತಮ “ಚಿತ್ರಪಟು” ಆಗಬಲ್ಲ. ಪತ್ರಕರ್ತ, ಕವಿ ನಾಗತಿಹಳ್ಳಿ ರಮೇಶ್ ಅಂಥ ಚಿತ್ರಪಟು. ಅವರ ಪರಿಕಲ್ಪನೆಯಲ್ಲಿ ಮೂಡಿ ಬಂದ ಛೋಟಾ ಸಿನಿಮಾಗಳೇ “ಬೇರುಗಳತ್ತ”. ಎನ್ ಸ್ಕ್ವೇರ್ ಪ್ರೊಡಕ್ಷನ್ಸ್ ಈ ಪುಟಾಣಿ ಸಿನಿಮಾಗಳನ್ನು ಹೊರತಂದಿದೆ. ಒಂದರಿಂದ ಮೂರು ನಿಮಿಷಗಳ ಅವಧಿಯಲ್ಲಿ ಇವು ಮೂಡಿಬಂದಿವೆ.





ಹೀಗೆಂದರು…