You are currently browsing the category archive for the 'ಕಥೆಗಳೋ ಕಥೆಗಳು' category.
ಅವನು ಇಳಿಯುತ್ತಲೇ ಹೋದ.
ಆಳ ಮೆಟ್ಟಿಲು. ಬೇರು. ಹಕ್ಕಿಯಿಲ್ಲದ ಗೂಡು.
ಅವನು ಇಳಿಯುತ್ತಲೇ ಹೋದ.
ಮಣ್ಣು. ಚೀರುವ ಬಾವಲಿ, ಮಂದ ಬೆಳಕು.
ಅವನು ಇಳಿಯುತ್ತಲೇ ಹೋದ.
ಇಲಿ ನುಂಗುತ್ತಿರುವ ಸರ್ಪ. ಹಸಿರು ಪಾಚಿ
ಅವನು ಇಳಿಯುತ್ತಲೆ ಹೋದ
ಅರೆ ಆಕಾಶ. ಕದಡಿದ.
ದಖನ್ ದೇಶದಲ್ಲಿ ಬಹಳ ಹಿಂದೆ ನಡೆದ ಕಥೆ. ದರೋಡೆಕೋರನೊಬ್ಬನಿಗೆ ಹಾದಿಹೋಕರನ್ನು ದೋಚುವುದೇ ಕೆಲಸ. ತಮ್ಮಲ್ಲಿದ್ದ ಎಲ್ಲವನ್ನೂ ಅವರು ಕೊಡಬೇಕಿತ್ತು ಇಲ್ಲವೇ ಹೆಣವಾಗಬೇಕಿತ್ತು. ಒಮ್ಮೊಮ್ಮೆ ಇವರ ತಂಡ ಇಡೀ ಹಳ್ಳಿಯನ್ನೇ ದೋಚುತ್ತಿತ್ತು.
ಅಂಥ ಒಂದು ಹಳ್ಳಿಯಲ್ಲಿ ಒಬ್ಬಳು. ದರೋಡೆಕೋರ ಅವಳನ್ನು ಹೊತ್ತೊಯ್ದ. ತಣಿಯುವಷ್ಟು ಪ್ರೇಮಿಸಿದ. ಒಂದು ದಿನ ಅದೆಂಥದೋ ದೊಡ್ಡ ಕಾಯಿಲೆ ಬಡಿದು ಅವಳು ಸತ್ತುಹೋದಳು. ಅವನಿಗೆ ಹುಚ್ಚು ಹಿಡಿಯುವುದೊಂದು ಬಾಕಿ. ತಾನು ಬಚ್ಚಿಟ್ಟದ್ದನ್ನೆಲ್ಲ ದಾನ ಮಾಡಿದ. ಸುಮ್ಮನೆ ಉದ್ದಕ್ಕೆ ನಡೆಯುತ್ತ ಹೋದ. ಹಲವು ದರೋಡೆಗಳನ್ನು ತಡೆದ. ಕಂಡವರಿಗೆ ಗಂಜಿ ಬೇಯಿಸಿ ಕೊಟ್ಟ.
ಹಾದಿಯಲ್ಲಿ ನಡೆಯುತ್ತಿದ್ದವನು ಇದ್ದಕ್ಕಿದಂತೆ ಜನರ ಎದೆಯೊಳಗೆ ನಡೆಯತೊಡಗಿದ. ಶತಮಾನಗಳನ್ನು ದಾಟಿದ.
ಅಲ್ಲೀಗ ಅವನಿಲ್ಲ
ಅವಳೂ…
ಆ ಕಸದತೊಟ್ಟಿಯ ಮಾಂಸದ ಮುದ್ದೆ ಮಗುವಾ?
ಮೊದಲನೇ ಅಲೆ
ಮರಳು, ಕಪ್ಪೆಚಿಪ್ಪು ಹೊತ್ತು ತಂದಿತು
ಎರಡನೇ ಅಲೆ
ಲೇಡಿಸ್ ವಾಚು, ಹರಿದ ರವಿಕೆ ಎಸೆಯಿತು
ಮೂರನೇ ಅಲೆ
ದಂಡೆಯ ಅಳುವನ್ನು ಕೇಳಿಸಿಕೊಂಡಿತು.
ರೈತನೊಬ್ಬನಿಗೆ ತನ್ನ ತೋಟದಲ್ಲಿ ಒಂದೇ ರೀತಿಯ ಹೂ ಬಿಟ್ಟು ಬೇರೇನೂ ಬೆಳೆಯುವುದು ಇಷ್ಟವಿರಲಿಲ್ಲ. ಗೆಳೆಯರೆಲ್ಲ ತೋಟ ನೀಟಾಗಿರುವ ಬಗ್ಗೆ ಹೊಗಳಿದರು. ಹೂವಿನ ಸುಗ್ಗಿ ಬಂತು. ಆದರೆ ಆದದ್ದೇ ಬೇರೆ.ಆ ಹೂಗಳಿಗೆ ರಾತ್ರೋ ರಾತ್ರಿ ರೋಗ ತಗುಲಿತ್ತು.
ಇನ್ನೆಂದೂ ರೈತ ಒಂದೇ ರೀತಿಯ ಬೆಳೆ ಬೆಳೆಯಲಿಲ್ಲ.
( ಹೂವನ್ನು ಜನರೆಂದೂ, ತೋಟವನ್ನು ದೇಶವೆಂದು ಓದಿಕೊಳ್ಳಿ.)
ಚಿಕ್ಕನಾಯಕನಹಳ್ಳಿಯಲ್ಲಿ ಒಬ್ಬ ಮೇಷ್ಟ್ರು. ಊರಾಚೆಯ ತೋಟದ ಮನೆಯಲ್ಲಿ ವಾಸ. ಸ್ಕೂಲು ಮತ್ತು ಅವರು, ಅವರು ಮತ್ತು ಸ್ಕೂಲು ಅಷ್ಟೆ. ಒಂದಿನ ವಿದ್ಯಾರ್ಥಿಯೊಬ್ಬ ಅವರ ತೋಟದಮನೆಗೆ ಬಂದ. ಮೇಷ್ಟ್ರು ಒಬ್ಬರೇ ಇರೋದು ಗೊತ್ತಿತ್ತು. ಆದರೂ ಇರಲಿ ಅಂತ ಕೇಳಿದ.
“ಸಾರ್ ಒಬ್ರೇ ಇದ್ದೀರಾ?”
“ಇಲ್ಲ”
“ಸುಳ್ಳು ಹೇಳ್ತಾ ಇದ್ದೀರಾ. ನೀವು ಒಂಟಿ ಅಂತ ಊರಿಗೇ ಗೊತ್ತು.”
ಮೇಷ್ಟ್ರು ನಗುತ್ತಾ ಅಲ್ಲೇ ಹರಿಯುತ್ತಿದ್ದ ಇರುವೆ ಸಾಲು ತೋರಿಸಿ ಹೇಳಿದರು
“ನಾನೊಬ್ಬನೇ ಇಲ್ಲ”
“ಎಲ್ಲಿದ್ದೀಯಾ?”
“ಎಲ್ಲೂ ಇಲ್ಲ”
ಕಥೆಗಳೆಲ್ಲ ಖಾಲಿಯಾದವು ಎಂದುಕೊಂಡು ಒಂದು ಸಂಜೆ ಸುಮ್ಮನೆ ಕುಳಿತಿದ್ದೆ. ಮೂರು ಬೆಕ್ಕುಗಳು ಮೂರು ಕೋಳಿಮರಿಗಳನ್ನು ಹಿಡಿದು ಕಥೆ ಇನ್ನೂ ಮುಗಿದಿಲ್ಲ ಎಂದವು.
” ನೀವು ಕೊಟ್ಟ ಮುಲಾಮು, ಹತ್ತಿ, ಇಂಜಕ್ಷನ್, ಗುಳಿಗೆ ಇವುಗಳಿಂದೆಲ್ಲ ಈ ಕಾಯಿಲೆ ವಾಸಿಯಾಗುತ್ತಾ ಡಾಕ್ಟರ್? ಅಷ್ಟಕ್ಕೂ ಈ ಕಾಯಿಲೆ ದೇಹಕ್ಕೆ ಸಂಬಂಧಿಸಿದ್ದಾ ಅಥವಾ…?”
ಅವನು ಕುಳಿತದ್ದು ಆಸ್ಪತ್ರೆಯಲ್ಲಲ್ಲ, ಮಾತನಾಡುತ್ತಿದ್ದದ್ದು ಡಾಕ್ಟರೊಂದಿಗಲ್ಲ.




ಹೀಗೆಂದರು…