You are currently browsing the category archive for the 'ಕವನ' category.
ನಕ್ಲೇಸು ರಸ್ತೆ ನಕ್ಲೇಸು ರಸ್ತೆ
ಕಪ್ಪನೆ ಕೈಯ್ಯ ಬಳಕುವ ಮೈಯ್ಯ
ಹಾವಿನ ಪೊರೆಯ, ಅಮಲಿನ ತೊರೆಯ
ನಕ್ಲೇಸು ರಸ್ತೆ ನಕ್ಲೇಸು ರಸ್ತೆ
ಕಾರಿದ್ದವರು ಮೇಲಿದ್ದವರು
ಬೂಟಿದ್ದವರು ಸೂಟಿದ್ದವರು
ಬಂದೇ ಬರುವರು ಬಂದೇ ಬರುವರು
ನಿನ್ನನು ಕಾಣಲು ನಿನ್ನನು ಕೂಡಲು
ಎಂಥ ಹೊಳಪು ಎಂಥ ಬಿಳುಪು
ಆಹಹಾ ಒಹೊಹೋ ನಿನ್ನದೆ ನೆನಪು
ನಿನ್ನಯ ತೊಡೆಯಲಿ ಮರೆತರು ಎಲ್ಲ
ಈಗಿದ್ದವರು ಆಗಿಲ್ಲ ಆಗಿದ್ದವರು ಈಗಿಲ್ಲ
ಕುಂತರು ನೀನೆ ನಿಂತರು ನೀನೆ
ಬೆಳಗಲು ನೀನೆ ಬೈಗಲು ನೀನೆ
ಮೊದಲೆಂದರೇನು ತಿಳಿದಿಲ್ಲ
ಕೊನೆಯೆಂಬುದೇನು ನಿನಗಿಲ್ಲ
ನಮ್ಮಯ ಬೀದಿ ನಮ್ಮಯ ಹಾದಿ
ಎಂದೆಂದೂ ಅದು ನಮ್ಮದು ನಮ್ಮದು
ಹೊರಟೆವು ನಾವು ನಕ್ಲೇಸು ರಸ್ತೆ
ಮರಳಿ ಬಾರೆವು ನಕ್ಲೇಸು ರಸ್ತೆ
(ಹೈದ್ರಾಬಾದ್ ಹುಸೇನ್ ಸಾಗರದ ಮಗ್ಗುಲಲ್ಲಿದೆ ನೆಕ್ಲೇಸ್ ರಸ್ತೆ.)
ಕತ್ತರಿಸಬೇಕು ಚೌಕಟ್ಟು
ಮೊಳೆ ತೆಗೆದು ಗೋಂದು ಬಿಡಿಸಿ
ಬಗೆದಿಡಬೇಕು
ಗಾಜು ಬಂದರೆ ಸರಿ
ಇಲ್ಲವಾದರೆ ಚೂರು
ಸಿಗುತ್ತಲ್ಲ ಆಗ
ಅದಕ್ಕಾಗೇ ಕಾದದ್ದು
ಹಲ್ಲು ಕಚ್ಚಿ ಹೊಂಚಿದ್ದು
ಸೋತದ್ದು
ಮೀನು ಮಂಜುಗಡ್ಡೆ
ಚೆರ್ರಿ ಚೂಪೆಲೆಯ ಮರ
ಹೆಣೆದ ತುಟಿಗಳು
ಗೋಡೆಯನ್ನೂ ಹಾಯುವ ಜನ
ಇಲ್ಲವಲ್ಲಾ ಇಲ್ಲಿ
ಕಾಣೆಯಾದವರು
ಕತ್ತಿಲ್ಲದವರು
ಸೀದವರು
ಮೊದಲು ಆ ಮೀನು
ಕಳೆಯಲೇಬೇಕು ಅದರ ಬಣ್ಣ
ಕಿತ್ತರೆ ಗೆರೆ
ಸೋರುವುದು ಮಂಜುಗಡ್ದೆ
ಕಟ್ಟ ಕಡೆಗೆ ಉಳಿದದ್ದು
ಅವನ ಸಹಿ ಮಾತ್ರ.
(ಅವಧಿ ಬ್ಲಾಗ್ ಗಿರಿಕಾ ಎಂಬ ಹೆಸರಿನಲ್ಲಿ ಪ್ರಕಟಿಸಿದ ಕವಿತೆ)
ಮೈ ತೊಳೆದು ಲಂಗ ತೊಡಿಸಿ ಕಾಡಿಗೆ ಇಡಬೇಕು
ಕಣ್ಣಾಗದಿರಲಿ
ಜರಿಲಂಗ ಒಪ್ಪುತ್ತೆ
ಮೊಗ್ಗಿನ ಜಡೆಗೆ ಸಂಪಿಗೆ ಒಳ್ಳೆ ಜೋಡಿ
ಜಡೆಬಿಲ್ಲೆ ಎಲ್ಲಿ
ಫೋಟೋಗೆ ಅಳಲ್ಲ ಅನ್ನಿಸುತ್ತೆ
ಪೌಡರು ಖಾಲಿ
ಈ ಹಾಳೆಗಳನ್ನೆಲ್ಲ ದೋಣಿ ಮಾಡಬೇಕು
ಮಳೆ ಅವಳಿಗಿಷ್ಟ
ನವಂಬರ್ ಶುರುವಾಗುತ್ತೆ
ಉಲ್ಲನ್ ಇಲ್ಲ. ಥಂಡಿ ಅವಳಿಗೆ ಆಗಲ್ಲ
ಬೀದಿಯಲ್ಲೊಬ್ಬ ಪುಟ್ಟ ಮಣ್ಣು ಹುಯ್ದುಕೊಳ್ಳುತ್ತಿದ್ದಾನೆ
ಸಂತೆಯಲ್ಲಿ ಮಕ್ಕಳ ಕದಿಯುತ್ತಾರಂತೆ
ಕಾಣದ ಮಸೀದಿ
ಹನಿಯುವ ಮೊರೆ
ಶಿವ ಶಿವೆಯರಿಗೆ ಎಚ್ಚರ
ನೆನೆದ ಖುಷಿಯಲ್ಲಿ
ಹೊರಟಿದ್ದಾರೆ ಹೊಲಕ್ಕೆ
ರೊಟ್ಟಿ ತಟ್ಟಿ
ಬರುತ್ತಾ ಅಂಗಿ ತರುತ್ತಾರಂತೆ
ರಂಜಾನ್ ಚಂದ್ರನಿಗೆ
ನಸುನಗುತ್ತಿದ್ದಾನೆ ಅಲ್ಲಾಹು
ಹೊತ್ತು ಆಕಾಶ
ಚುಕ್ಕಿ ಚಂದ್ರಮ ಹಕ್ಕಿ
ಗಾಳಿಪಟದೋಣಿಯಲ್ಲಿ
ಮುತ್ತಿನ ಜೋಳಿಗೆ ಹಿಡಿದು
ಮದರಂಗಿ ಮೈಯ್ಯ ನಾಕು ಕಾಲಿನ
ನಾಕು ಕೋಡಿನ ಅನಂತ ಸೂಫಿ
ನಡೆದಾಗ
ಸಮಾಧಿಯೇ ತೊಟ್ಟಿಲು
ಮುದಿ ಚರಿತ್ರೆ ಮತ್ತೆ ಮಗು
ಅದೆಷ್ಟು ಕನಸು ಒಳಗೊಳಗೆ
ಪುಟ್ಟ ಹಣತೆಗೆ ಕಣ್ಣಾಗುವ
ಕಣ್ಣಿಗೆ ಬೆಳಕಾಗುವ
ಬೆಳಕೇ ಸಿಡಿದು ಬೆಂಕಿಯಾಗುವ
ಅದೆಷ್ಟೋ ಕನಸು ಒಳಗೊಳಗೆ
ಬೇಕಿದೆ ಕೀರಲು ದನಿಗೊಂದು ಕೆನ್ನಾಲಿಗೆ
ಕತ್ತಲ ಮುಖಕ್ಕೆ ರಾಚಲೊಂದು ಕೊಳ್ಳಿ
ಪ್ರೀತಿಯ ಕುರುಹಾಗಿ ಒಂದು ಬೆಳಕ ಬುಟ್ಟಿ
ಅದಕ್ಕಾಗೇ ಗೀರಲೇ ಬೇಕಿದೆ.
ಸುಟ್ತು ಕರಕಾಗುವ ಹೊತ್ತಲ್ಲಿ
ಚಣವಾದರೂ ಹೊತ್ತಿ ಉರಿಯಲಿ
ನೋವ ಸುಡುವ ಹಾಡು
ಕಿಡಿಗೆ ಜೀವಕೊಡುವ ಕಾವು
ಒಳಗೆ ಒಳಗೊಳಗೆ
ಸುಮ್ಮನೆ ಸೊರಗಲಾರವು
ಚಣವಾದರೂ ಹೊತ್ತಿ ಉರಿಯಲಿ
ಕತ್ತಲು ಕತ್ತು ಹಿಸುಕುವ ಮುನ್ನ
ಕನಸು ಆರುವ ಮುನ್ನ
ಗೀರಿಬಿಡಬೇಕು
ಮುಂದೊಂದು ದಿವಸ
ಬೆಂಕಿ ಮಗಳು ಹುಟ್ಟಿ ಬಂದಾಳು
ಬೆಳಕ ಹೂವ ಬೆಳೆದು ತಂದಾಳು
ತೆಂಗಿನೊಂಬಾಳೇಲಿ
ಗಡಿಗೆಗಂಟಿದ ಜೇನ
ಮಂಡಿಪೇಟೇಲಿ ಕದ್ದು ಮಾರಿದ್ದು
ಜಟ್ಕಾಗಾಡೀಲಿ ತುಮ್ಕೂರು
ತಿರುಗಿದ್ದು
ಮುಂಜಾನೆದ್ದು
ಕಲ್ಲುಸಕ್ಕರೆ ಬೆರೆಸಿ
ಗಟಗಟಾ ಕುಡಿದಿದ್ದು
ಸರಾಯಿ ಪಾಪಯ್ಯ ಶಾನೆ
ಲಾಸಾಗಿ ಕಂಪ್ಲೇಂಟು ಗೀಚಿದ್ದು
ಗಾಂಧಿ ಹೆಸರಲ್ಲಿ
ಜನದನ ರಸ್ತೆಗಿಳಿದು
ಘೀಳಿಟ್ಟಿದ್ದು
ಪೋಲೀಸಪ್ಪನ ಬುಲೆಟ್ಟು ಗುರಿತಪ್ಪಿ
ಗೋಡೆಗಳ ಹೊಕ್ಕಿದ್ದು
ಬಳ್ಳಾರಿ ಜೈಲಲ್ಲಿಟ್ಟ ಹೂಗಳು
ಬಾಡದೆ ಹಿಂತಿರುಗಿದ್ದು
ಹೆಂಟೆ ಮಣ್ಣಿನ ತುಂಬ
ಉದ್ದ ಟೋಪಿಯ ಸಂತ
ಸದಾ ಜೀವಂತ


ಹೀಗೆಂದರು…